ಇಬ್ರಿಯ
4 ಆದುದರಿಂದ, ದೇವರ ವಿಶ್ರಾಂತಿಯಲ್ಲಿ ಸೇರುವ ವಾಗ್ದಾನವು ಇನ್ನೂ ಇರುವುದರಿಂದ ನಿಮ್ಮಲ್ಲಿ ಯಾವನಾದರೂ ಯಾವುದೇ ಸಮಯದಲ್ಲಿ ಆ ವಾಗ್ದಾನದ ಫಲವನ್ನು ಹೊಂದಲು ತಪ್ಪಿಹೋಗುವವನಾಗಿ ಕಂಡುಬಂದಾನೋ ಎಂದು ನಾವು ಭಯಪಡೋಣ. 2 ಅವರಿಗೆ ಸುವಾರ್ತೆಯು ಪ್ರಕಟಿಸಲ್ಪಟ್ಟಂತೆ ನಮಗೂ ಪ್ರಕಟಿಸಲ್ಪಟ್ಟಿತು; ಆದರೆ ಕೇಳಿಸಿಕೊಂಡವರೊಂದಿಗೆ ಅವರು ನಂಬಿಕೆಯಲ್ಲಿ ಐಕ್ಯರಾಗಿರಲಿಲ್ಲವಾದ್ದರಿಂದ ಕೇಳಿಸಿಕೊಂಡ ವಾಕ್ಯವು ಅವರಿಗೆ ಪ್ರಯೋಜನವನ್ನು ತರಲಿಲ್ಲ. 3 ದೇವರ ಕಾರ್ಯಗಳು ಲೋಕದ ಆದಿಯಿಂದ ಮುಗಿಸಲ್ಪಟ್ಟಿರುವುದಾದರೂ, “ ‘ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ’ ಎಂದು ನಾನು ಕೋಪದಿಂದ ಪ್ರಮಾಣಮಾಡಿದೆನು” ಎಂದು ಆತನು ಹೇಳಿದ್ದಾನೆ; ನಂಬಿಕೆಯಿಟ್ಟವರಾದ ನಾವಾದರೋ ಆತನ ವಿಶ್ರಾಂತಿಯಲ್ಲಿ ನಿಶ್ಚಯ ಸೇರುತ್ತೇವೆ. 4 ಒಂದು ಸ್ಥಳದಲ್ಲಿ ಆತನು ಏಳನೆಯ ದಿನದ ಕುರಿತು, “ದೇವರು ತನ್ನ ಕಾರ್ಯಗಳನ್ನೆಲ್ಲ ಮುಗಿಸಿ ಏಳನೆಯ ದಿನದಲ್ಲಿ ವಿಶ್ರಮಿಸಿದನು” ಎಂದೂ 5 ಈ ಸ್ಥಳದಲ್ಲಿ “ಅವರು ನನ್ನ ವಿಶ್ರಾಂತಿಯಲ್ಲಿ ಸೇರುವುದೇ ಇಲ್ಲ” ಎಂದೂ ಹೇಳಿದ್ದಾನೆ.
6 ಆದುದರಿಂದ ಕೆಲವರು ಅದರಲ್ಲಿ ಇನ್ನೂ ಸೇರಲಿಕ್ಕಿರುವುದರಿಂದ ಮತ್ತು ಸುವಾರ್ತೆಯು ಯಾರಿಗೆ ಮೊದಲು ಪ್ರಕಟಿಸಲ್ಪಟ್ಟಿತೋ ಅವರು ಅವಿಧೇಯತೆಯ ಕಾರಣ ಅದರಲ್ಲಿ ಸೇರದೇ ಹೋದುದರಿಂದ 7 ದೀರ್ಘ ಕಾಲ ಸಂದ ಬಳಿಕ ಆತನು ದಾವೀದನ ಕೀರ್ತನೆಯಲ್ಲಿ “ಈ ದಿನ” ಎಂದು ಹೇಳಿ ಪುನಃ ಒಂದು ನಿರ್ದಿಷ್ಟ ದಿನವನ್ನು ಗೊತ್ತುಮಾಡುತ್ತಾನೆ; ಹೇಗೆಂದರೆ, “ನೀವು ಈ ದಿನ ಆತನ ಸ್ವರಕ್ಕೆ ಕಿವಿಗೊಡುವುದಾದರೆ, ನಿಮ್ಮ ಹೃದಯಗಳನ್ನು ಕಠಿನಮಾಡಿಕೊಳ್ಳಬೇಡಿರಿ” ಎಂದು ಮೇಲೆ ತಿಳಿಸಲಾಗಿದೆ. 8 ಯೆಹೋಶುವನು ಅವರನ್ನು ವಿಶ್ರಾಂತಿಯ ಸ್ಥಳಕ್ಕೆ ನಡೆಸಿರುತ್ತಿದ್ದರೆ ತರುವಾಯ ದೇವರು ಇನ್ನೊಂದು ದಿನದ ಕುರಿತು ಹೇಳುತ್ತಿರಲಿಲ್ಲ. 9 ಆದುದರಿಂದ ದೇವರ ಜನರಿಗೆ ಒಂದು ಸಬ್ಬತ್ ವಿಶ್ರಾಂತಿಯು ಇನ್ನೂ ಇದೆ. 10 ದೇವರು ತನ್ನ ಸ್ವಂತ ಕಾರ್ಯಗಳನ್ನು ಮುಗಿಸಿ ವಿಶ್ರಮಿಸಿಕೊಂಡಂತೆಯೇ, ದೇವರ ವಿಶ್ರಾಂತಿಯಲ್ಲಿ ಸೇರಿದವನು ಸಹ ತನ್ನ ಸ್ವಂತ ಕಾರ್ಯಗಳಿಂದ ವಿಶ್ರಮಿಸಿಕೊಂಡಿದ್ದಾನೆ.
11 ಆದುದರಿಂದ ಯಾವನಾದರೂ ಅದೇ ನಮೂನೆಯ ಅವಿಧೇಯತೆಯಿಂದ ಬಿದ್ದಾನೆಂಬ ಭಯದಿಂದ, ಆ ವಿಶ್ರಾಂತಿಯಲ್ಲಿ ಸೇರುವುದಕ್ಕೆ ನಮ್ಮಿಂದಾಗುವ ಪರಮ ಪ್ರಯತ್ನವನ್ನು ಮಾಡೋಣ. 12 ದೇವರ ವಾಕ್ಯವು ಸಜೀವವಾದದ್ದೂ ಪ್ರಬಲವಾದದ್ದೂ ಯಾವುದೇ ಇಬ್ಬಾಯಿಕತ್ತಿಗಿಂತಲೂ ಹರಿತವಾದದ್ದೂ ಪ್ರಾಣಮನಸ್ಸುಗಳನ್ನು ಮತ್ತು ಕೀಲುಮಜ್ಜೆಗಳನ್ನು ವಿಭಾಗಿಸುವಷ್ಟರ ಮಟ್ಟಿಗೆ ತೂರಿಹೋಗುವಂಥದ್ದೂ ಹೃದಯದ ಆಲೋಚನೆಗಳನ್ನೂ ಸಂಕಲ್ಪಗಳನ್ನೂ ವಿವೇಚಿಸಲು ಶಕ್ತವಾಗಿರುವಂಥದ್ದೂ ಆಗಿದೆ. 13 ಆತನ ದೃಷ್ಟಿಗೆ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ; ನಾವು ಯಾರಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ಕಣ್ಣುಗಳಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದೂ ಬಟ್ಟಬಯಲಾದದ್ದೂ ಆಗಿದೆ.
14 ಆದುದರಿಂದ ಆಕಾಶವನ್ನು ದಾಟಿಹೋಗಿರುವ ದೇವರ ಮಗನಾದ ಯೇಸುವೆಂಬ ಶ್ರೇಷ್ಠ ಮಹಾ ಯಾಜಕನು ನಮಗಿರುವುದರಿಂದ ಅವನ ಕುರಿತು ನಾವು ಅರಿಕೆಮಾಡುವ ನಂಬಿಕೆಯನ್ನು ಬಿಗಿಯಾಗಿ ಹಿಡಿದುಕೊಂಡಿರೋಣ. 15 ಏಕೆಂದರೆ ನಮಗಿರುವ ಮಹಾ ಯಾಜಕನು ನಮ್ಮ ಬಲಹೀನತೆಗಳ ಕಡೆಗೆ ಅನುತಾಪಪಡಲು ಸಾಧ್ಯವಿಲ್ಲದವನಲ್ಲ, ಬದಲಿಗೆ ಅವನು ನಮ್ಮಂತೆಯೇ ಎಲ್ಲ ವಿಷಯಗಳಲ್ಲಿ ಪರೀಕ್ಷಿತನಾದರೂ ಪಾಪರಹಿತನಾಗಿದ್ದಾನೆ. 16 ಹೀಗಿರುವುದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಅಪಾತ್ರ ದಯೆಯಿಂದ ಸಮಯೋಚಿತವಾದ ಸಹಾಯವನ್ನು ಕಂಡುಕೊಳ್ಳುವಂತೆಯೂ ನಾವು ಅಪಾತ್ರ ದಯೆಯ ಸಿಂಹಾಸನವನ್ನು ವಾಕ್ಸರಳತೆಯಿಂದ ಸಮೀಪಿಸೋಣ.