ಗುರುವಾರ, ಮಾರ್ಚ್ 28
ಮತ್ತೆ ಮಣ್ಣಿಗೇ ಹೋಗ್ತಿಯ.—ಆದಿ. 3:19.
ಆದಾಮ ಹವ್ವ ಮಾಡಿದ ತಪ್ಪನ್ನ ನಾವೂ ಮಾಡಬಾರದು. ಅದಕ್ಕೆ ನಾವು ಯೆಹೋವನ ಬಗ್ಗೆ ಆತನ ಗುಣಗಳ ಬಗ್ಗೆ ಚೆನ್ನಾಗಿ ತಿಳ್ಕೋಬೇಕು. ಆತನು ಹೇಗೆ ಯೋಚನೆ ಮಾಡ್ತಾನೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. ಆಗ ನಮಗೆ ಆತನ ಮೇಲಿರೋ ಪ್ರೀತಿ ಜಾಸ್ತಿಯಾಗುತ್ತೆ. ಅಬ್ರಹಾಮನ ಉದಾಹರಣೆ ನೋಡಿ. ಅಬ್ರಹಾಮನಿಗೆ ಯೆಹೋವ ಅಂದ್ರೆ ತುಂಬ ಇಷ್ಟ. ಯೆಹೋವ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಾಗ ಅದಕ್ಕೆ ಕಾರಣ ಏನು ಅಂತ ಅಬ್ರಹಾಮನಿಗೆ ಗೊತ್ತಿಲ್ಲದಿದ್ದರೂ, ಅವನು ಅದನ್ನ ಒಪ್ಪಿಕೊಳ್ಳುತ್ತಿದ್ದ, ಆತನನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳೋಕೆ ಪ್ರಯತ್ನ ಮಾಡ್ತಿದ್ದ. ಉದಾಹರಣೆಗೆ, ಸೊದೋಮ್ ಗೊಮೋರವನ್ನ ಯೆಹೋವ ನಾಶ ಮಾಡಬೇಕು ಅಂತ ತೀರ್ಮಾನ ಮಾಡಿದಾಗ ಅಬ್ರಹಾಮನಿಗೆ ಮೊದಮೊದಲು ತುಂಬ ಭಯ ಆಯ್ತು. “ಇಡೀ ಭೂಮಿಯ ನ್ಯಾಯಾಧೀಶನಾದ” ಯೆಹೋವ ಕೆಟ್ಟವರ ಜೊತೆ ಒಳ್ಳೆಯವರನ್ನೂ ನಾಶ ಮಾಡಿಬಿಡ್ತಾನೇನೋ ಅಂತ ಹೆದರಿಕೊಂಡಿದ್ದ. ಆದ್ರೆ ಯೆಹೋವ ಹೀಗೆ ಮಾಡೋಕೆ ಸಾಧ್ಯಾನೇ ಇಲ್ಲ ಅಂತ ಅವನಿಗೆ ಗೊತ್ತಿತ್ತು. ಅದಕ್ಕೆ ಅವನು ಆತನ ಹತ್ರ ಪ್ರಶ್ನೆಗಳನ್ನ ಕೇಳಿದ, ಯೆಹೋವನೂ ಅವನಿಗೆ ಉತ್ತರ ಕೊಟ್ಟನು. ಯೆಹೋವ ಪ್ರತಿಯೊಬ್ಬರ ಮನಸ್ಸಲ್ಲಿ ಏನಿದೆ ಅನ್ನೋದನ್ನ ನೋಡ್ತಾನೆ. ಹಾಗಾಗಿ ಕೆಟ್ಟವರ ಜೊತೆ ಒಳ್ಳೆಯವರನ್ನ ನಾಶ ಮಾಡಲ್ಲ ಅಂತ ಅಬ್ರಹಾಮ ಅರ್ಥ ಮಾಡಿಕೊಂಡ.—ಆದಿ. 18:20-32. w22.08 28 ¶9-10
ಶುಕ್ರವಾರ, ಮಾರ್ಚ್ 29
ನಂಬಿಗಸ್ತ ವ್ಯಕ್ತಿ ಗುಟ್ಟನ್ನ ಗುಟ್ಟಾಗೇ ಇಡ್ತಾನೆ.—ಜ್ಞಾನೋ. 11:13.
ಕ್ರಿಸ್ತ ಪೂರ್ವ 455ರಲ್ಲಿ ರಾಜ್ಯಪಾಲನಾಗಿದ್ದ ನೆಹೆಮೀಯ ಯೆರೂಸಲೇಮ್ ಗೋಡೆಗಳನ್ನ ಪುನಃ ಕಟ್ಟಿದ. ಅದಾದ ಮೇಲೆ ಆ ಇಡೀ ಪಟ್ಟಣನ ನೋಡಿಕೊಳ್ಳೋಕೆ ಕೊಟ್ಟ ಕೆಲಸನ ಚೆನ್ನಾಗಿ, ನಂಬಿಗಸ್ತಿಕೆಯಿಂದ ಮಾಡೋ ಕೆಲವು ವ್ಯಕ್ತಿಗಳನ್ನ ಆರಿಸಿಕೊಳ್ಳಬೇಕಿತ್ತು. ಆಗ ಅವನು ಕೋಟೆಯ ಅಧಿಪತಿಯಾಗಿದ್ದ ಹನನ್ಯನನ್ನ ಆರಿಸಿಕೊಳ್ತಾನೆ. “ಯಾಕಂದ್ರೆ ಹನನ್ಯ ನಂಬಿಗಸ್ತನಾಗಿದ್ದ. ಬೇರೆಯವ್ರಿಗಿಂತ ಅವನಿಗೆ ಸತ್ಯ ದೇವರ ಮೇಲೆ ಜಾಸ್ತಿ ಭಯ ಇತ್ತು” ಅಂತ ಬೈಬಲ್ ಹೇಳುತ್ತೆ. (ನೆಹೆ. 7:2) ಹನನ್ಯನಿಗೆ ದೇವರ ಮೇಲೆ ಪ್ರೀತಿ ಮತ್ತು ಭಯಭಕ್ತಿ ಇದ್ದಿದ್ರಿಂದ ಅವನು ತನಗೆ ಕೊಟ್ಟ ಕೆಲಸನ ತುಂಬ ಶ್ರದ್ಧೆಯಿಂದ ಮಾಡುತ್ತಿದ್ದ. ನಾವೂ ಹನನ್ಯನ ತರ ಇದ್ರೆ ಯೆಹೋವ ನಮ್ಮನ್ನ ನಂಬಿ ದೊಡ್ಡದೊಡ್ಡ ಕೆಲಸಗಳನ್ನ ಕೊಡ್ತಾನೆ. ಅಪೊಸ್ತಲ ಪೌಲ ತುಖಿಕನನ್ನ ತುಂಬ ನಂಬುತ್ತಿದ್ದ. ತುಖಿಕ ಅವನಿಗೆ ತುಂಬ ಸಹಾಯ ಮಾಡಿದ. ಪೌಲ ಅವನನ್ನ “ನಂಬಿಗಸ್ತ ಸೇವಕ” ಅಂತ ಕರೆದ. (ಎಫೆ. 6:21, 22) ಎಫೆಸ ಮತ್ತು ಕೊಲೊಸ್ಸೆಯಲ್ಲಿದ್ದ ಸಹೋದರರಿಗೆ ಪತ್ರ ಕಳಿಸೋಕಷ್ಟೇ ಅಲ್ಲ, ಅವರಿಗೆ ಪ್ರೋತ್ಸಾಹ ಕೊಡೋಕೆ, ಸಾಂತ್ವನ ಕೊಡೋಕೆ ಪೌಲ ಅವನನ್ನ ಕಳಿಸುತ್ತಿದ್ದ. ಇದ್ರಿಂದ ಅವನು ತುಖಿಕನನ್ನ ಎಷ್ಟು ನಂಬುತ್ತಿದ್ದ ಅಂತ ಗೊತ್ತಾಗುತ್ತೆ. ತುಖಿಕನ ಉದಾಹರಣೆ ನೋಡುವಾಗ ಯೆಹೋವನ ಮೇಲೆ ನಂಬಿಕೆ ಬೆಳೆಸಿಕೊಳ್ಳೋಕೆ ನಮಗೆ ಸಹಾಯ ಮಾಡುತ್ತಿರೋ ಎಷ್ಟೋ ನಂಬಿಗಸ್ತ ಸಹೋದರರು ನಮ್ಮ ಕಣ್ಮುಂದೆ ಬರುತ್ತಾರೆ.—ಕೊಲೊ. 4:7-9. w22.09 9-10 ¶5-6
ಶನಿವಾರ, ಮಾರ್ಚ್ 30
ಪ್ರೀತಿ ಇರೋ ವ್ಯಕ್ತಿ ಯಾವಾಗ್ಲೂ ಬೇರೆಯವ್ರ ತಪ್ಪುಗಳನ್ನ ಕ್ಷಮಿಸ್ತಾನೆ.—1 ಪೇತ್ರ 4:8.
ಯೋಸೇಫ ಒಂದಲ್ಲ ಎರಡಲ್ಲ ಹದಿಮೂರು ವರ್ಷ ಕಷ್ಟ ಅನುಭವಿಸಬೇಕಾಯ್ತು. ಆದ್ರೂ ಯೋಸೇಫ ‘ಯೆಹೋವ ದೇವರು ನನ್ನನ್ನ ಪ್ರೀತಿಸ್ತಿಲ್ಲ, ನನಗೆ ಕಷ್ಟ ಬಂದಾಗಲೇ ಕೈ ಬಿಟ್ಟುಬಿಟ್ಟನು’ ಅಂತ ಯೋಚಿಸಲಿಲ್ಲ. ಅವನು ಯೆಹೋವನ ಮೇಲಾಗಲಿ ಅಣ್ಣಂದಿರ ಮೇಲಾಗಲಿ ಕೋಪ ಮಾಡಿಕೊಳ್ಳಲಿಲ್ಲ. ಅವನಿಗಾದ ಅನ್ಯಾಯನ ನೆನಸಿಕೊಂಡು ತಲೆ ಕೆಡಿಸಿಕೊಳ್ಳದೆ ಇದ್ದಿದ್ರಿಂದ ಸರಿಯಾಗಿ ಯೋಚನೆ ಮಾಡೋಕಾಯ್ತು. ಅದಕ್ಕೆ ಅಣ್ಣಂದಿರ ಮೇಲೆ ಸೇಡು ತೀರಿಸಿಕೊಳ್ಳೋಕೆ ಅವಕಾಶ ಸಿಕ್ಕಿದ್ರೂ ಅವನು ಹಾಗೆ ಮಾಡ್ಲಿಲ್ಲ, ಅವರನ್ನ ಕ್ಷಮಿಸಿಬಿಟ್ಟ. ಅವರಿಗೆ ಪ್ರೀತಿ ತೋರಿಸಿದ. (ಆದಿ. 45:4, 5) ಯೋಸೇಫನಿಗೆ ಇದನ್ನೆಲ್ಲ ಮಾಡೋಕೆ ಯಾವುದು ಸಹಾಯ ಮಾಡ್ತು? ಅವನು ತನ್ನ ಕಷ್ಟಗಳ ಬಗ್ಗೆನೇ ಯೋಚನೆ ಮಾಡ್ತಿರ್ಲಿಲ್ಲ, ಯೆಹೋವನ ಉದ್ದೇಶ ಏನು ಅನ್ನೋದ್ರ ಬಗ್ಗೆ ಯೋಚನೆ ಮಾಡ್ತಿದ್ದ. (ಆದಿ. 50:19-21) ಇದರಿಂದ ನಾವೇನು ಕಲಿತೀವಿ? ಯಾರಾದ್ರೂ ನಮಗೆ ಅನ್ಯಾಯ ಮಾಡ್ದಾಗ ಯೆಹೋವನ ಮೇಲೆ ಕೋಪ ಮಾಡ್ಕೊಬಾರದು, ಯೆಹೋವ ನನ್ನ ಕೈ ಬಿಟ್ಟುಬಿಟ್ಟಿದ್ದಾನೆ ಅಂತನೂ ಅಂದುಕೊಳ್ಳಬಾರದು. ಬದಲಿಗೆ ಆ ಕಷ್ಟನ ಸಹಿಸಿಕೊಳ್ಳೋಕೆ ಯೆಹೋವ ಹೇಗೆಲ್ಲ ಸಹಾಯ ಮಾಡ್ತಿದ್ದಾನೆ ಅಂತ ಯೋಚಿಸಬೇಕು. ಅಷ್ಟೇ ಅಲ್ಲ ನಮಗೆ ಅನ್ಯಾಯ ಮಾಡಿದವರ ಮೇಲೆನೂ ನಾವು ಕೋಪ ಮಾಡ್ಕೊಬಾರದು. ಅವರಿಗೆ ಪ್ರೀತಿ ತೋರಿಸ್ತಾ ಅವರ ತಪ್ಪುಗಳನ್ನ ಮರೆತುಬಿಡಬೇಕು. w22.11 21 ¶4