ಗುರುವಾರ, ಏಪ್ರಿಲ್ 30
ನೀನು ಮಾಡಿದ ಪಾಪವನ್ನ ಯೆಹೋವ ಕ್ಷಮಿಸ್ತಾನೆ. ನೀನು ಸಾಯಲ್ಲ.—2 ಸಮು. 12:13.
ಯೆಹೋವ ಕರುಣಾಮಯಿ ದೇವರು, “ಯಾರೂ ನಾಶ ಆಗಬಾರದು” ಅನ್ನೋದು ಆತನ ಇಷ್ಟ ಅಂತ ನಮಗೆ ಗೊತ್ತು. ಆದ್ರೆ ದೊಡ್ಡದೊಡ್ಡ ತಪ್ಪು ಮಾಡುವವ್ರಿಗೆ ಆತನು ಹೇಗೆ ಕರುಣೆ ತೋರಿಸ್ತಾನೆ? (2 ಪೇತ್ರ 3:9) ಉದಾಹರಣೆಗೆ, ರಾಜ ದಾವೀದ ವ್ಯಭಿಚಾರ ಮಾಡಿದ, ಕೊಲೆ ಮಾಡಿದ. ಇಷ್ಟೆಲ್ಲಾ ತಪ್ಪು ಮಾಡಿದ್ರೂ ಅವನು ಪಶ್ಚಾತ್ತಾಪ ಪಟ್ಟಾಗ ಯೆಹೋವ ಅವನನ್ನ ಕ್ಷಮಿಸಿದನು. (2 ಸಮು. 12:1-12) ರಾಜ ಮನಸ್ಸೆ ಬಗ್ಗೆ ನೋಡಿ. ಅವನು ತನ್ನ ಜೀವನದುದ್ದಕ್ಕೂ ಬರೀ ಕೆಟ್ಟ ಕೆಲಸಗಳನ್ನೇ ಮಾಡಿದ. ಇಷ್ಟೆಲ್ಲಾ ತಪ್ಪುಗಳನ್ನ ಮಾಡಿದ್ರೂ ಕೊನೆಗೆ ಅವನು ಪಶ್ಚಾತ್ತಾಪ ಪಟ್ಟಾಗ ಯೆಹೋವ ಅವನ ಕೈಬಿಟ್ಟನಾ? ಇಲ್ಲ. ಆಗ್ಲೂ ಯೆಹೋವ ಅವನಿಗೆ ಕರುಣೆ ತೋರಿಸಿದನು ಮತ್ತು ಕ್ಷಮಿಸಿದನು. (2 ಪೂರ್ವ. 33:9-16) ಈ ಉದಾಹರಣೆಗಳಿಂದ ನಮಗೆ ಏನು ಗೊತ್ತಾಗುತ್ತೆ? ಕಾರಣ ಇದ್ರೆ ಯೆಹೋವ ಖಂಡಿತ ಕರುಣೆ ತೋರಿಸೇ ತೋರಿಸ್ತಾನೆ. ಇವ್ರ ತರ ಒಬ್ಬ ವ್ಯಕ್ತಿ ದೊಡ್ಡದೊಡ್ಡ ತಪ್ಪುಗಳನ್ನ ಮಾಡಿದ್ರೂ ತಿದ್ಕೊಂಡು ಬದಲಾದ್ರೆ ಅವನು ತೀರಿಹೋದ್ರೂ ಯೆಹೋವ ಅವನಿಗೆ ಮತ್ತೆ ಜೀವ ಕೊಡ್ತಾನೆ. w24.05 4 ¶12
ಶುಕ್ರವಾರ, ಮೇ 1
ದೇವರು ಭೇದಭಾವ ಮಾಡಲ್ಲ.—ರೋಮ. 2:11.
ಯೆಹೋವ ದೇವರು ಇಸ್ರಾಯೇಲ್ಯರನ್ನ ಈಜಿಪ್ಟಿನಿಂದ ಬಿಡಿಸ್ಕೊಂಡು ಬಂದ್ಮೇಲೆ ದೇವದರ್ಶನ ಡೇರೆಯಲ್ಲಿ ಪುರೋಹಿತರನ್ನ ಸೇವೆ ಮಾಡೋಕೆ ನೇಮಿಸಿದನು. ಅಷ್ಟೇ ಅಲ್ಲ ಪವಿತ್ರ ಡೇರೆಯಲ್ಲಿ ಬೇರೆ ಕೆಲಸಗಳನ್ನ ಮಾಡೋಕೆ ಲೇವಿಯರನ್ನ ನೇಮಿಸಿದನು. ಹಾಗಂತ ದೇವದರ್ಶನ ಡೇರೆಯಲ್ಲಿ ಕೆಲಸ ಮಾಡ್ತಿದ್ದವರಿಗೆ ಮತ್ತು ಆ ಡೇರೆಯ ಹತ್ರ ಇದ್ದ ಜನರಿಗೆ ಯೆಹೋವ ಬೇರೆಯವರಿಗಿಂತ ವಿಶೇಷ ಕಾಳಜಿ ತೋರಿಸಿದನಾ? ಇಲ್ಲ. ಯೆಹೋವ ಭೇದಭಾವ ಮಾಡಲಿಲ್ಲ. ಎಲ್ಲ ಇಸ್ರಾಯೇಲ್ಯರು ಯೆಹೋವನಿಗೆ ಒಳ್ಳೆ ಫ್ರೆಂಡ್ಸ್ ಆಗಬಹುದಿತ್ತು. ಉದಾಹರಣೆಗೆ, ಯೆಹೋವ ದೇವರು ಇಡೀ ಜನಾಂಗಕ್ಕೆ ಪವಿತ್ರ ಡೇರೆಯ ಮೇಲಿದ್ದ ಬೆಂಕಿ ಮತ್ತು ಮೋಡ ಕಾಣೋ ತರ ಮಾಡಿದನು. ಪವಿತ್ರ ಡೇರೆಯ ಮೇಲೆ ಮುಚ್ಚಿದ್ದ ಮೋಡ ಮೇಲೆ ಎದ್ದಾಗ ಅದು ದೂರದಲ್ಲಿರೋ ಇಸ್ರಾಯೇಲ್ಯರಿಗೂ ಕಾಣಿಸ್ತಿತ್ತು. (ವಿಮೋ. 40:38) ಅದನ್ನ ನೋಡಿದ ತಕ್ಷಣ ಎಲ್ಲ ಇಸ್ರಾಯೇಲ್ಯರು ತಮ್ಮ ವಸ್ತುಗಳನ್ನೆಲ್ಲ ತಗೊಂಡು ಡೇರೆ ಕಿತ್ಕೊಂಡು ಆ ಮೋಡ ಹಿಂದೆನೇ ಒಟ್ಟೊಟ್ಟಿಗೆ ಹೋಗ್ತಿದ್ರು. (ಅರ. 9:15-23) ಅದೇ ತರ ನಾವು ಇವತ್ತು ಈ ಲೋಕದ ಯಾವ ಮೂಲೆಯಲ್ಲಿ ಇದ್ದರೂ ಯೆಹೋವ ನಮ್ಮನ್ನ ಪ್ರೀತಿಸ್ತಾನೆ, ಯಾವಾಗ್ಲೂ ಚೆನ್ನಾಗಿ ನೋಡ್ಕೊಳ್ತಾನೆ ಮತ್ತು ನಮ್ಮನ್ನ ಕಾಪಾಡ್ತಾನೆ. w24.06 4 ¶10-12
ಶನಿವಾರ, ಮೇ 2
ನಮ್ಮಲ್ಲಿ ಯಾರೂ ಅಬ್ಷಾಲೋಮನ ಕೈಯಿಂದ ತಪ್ಪಿಸಿಕೊಳ್ಳೋಕೆ ಆಗಲ್ಲ. ಇಲ್ಲಿಂದ ಓಡಿಹೋಗೋಣ!—2 ಸಮು. 15:14.
ದಾವೀದನ ಜೀವ ಅಪಾಯದಲ್ಲಿತ್ತು. ಯಾಕಂದ್ರೆ ಅವನ ಮಗ ಅಬ್ಷಾಲೋಮ ದಾವೀದನ ಬದ್ಲು ತಾನೇ ರಾಜನಾಗಬೇಕು ಅಂತ ತೀರ್ಮಾನ ಮಾಡಿದ್ದ. (2 ಸಮು. 15:12, 13) ಹಾಗಾಗಿ ದಾವೀದ ಯೆರೂಸಲೇಮನ್ನ ಬಿಟ್ಟು ಓಡಿ ಹೋಗಬೇಕಾಯ್ತು. ಆದ್ರೆ ಹೋಗ್ತಿರುವಾಗ ತನ್ನ ಎಲ್ಲಾ ಸೇವಕರನ್ನ ಕರ್ಕೊಂಡು ಹೋದ್ರೆ ಅಬ್ಷಾಲೋಮನ ಸಂಚನ್ನ ತಿಳ್ಕೊಳ್ಳೋಕೆ ಆಗಲ್ಲ ಅಂತ ನೆನಸಿ ಚಾದೋಕನನ್ನ ಮತ್ತು ಕೆಲವು ಪುರೋಹಿತರನ್ನ ವಾಪಸ್ ಯೆರೂಸಲೇಮಿಗೆ ಕಳಿಸಿದ. (2 ಸಮು. 15:27-29) ದಾವೀದ ಒಂದು ಪ್ಲ್ಯಾನ್ ಮಾಡ್ತಾನೆ. ಅದಕ್ಕೆ ತನ್ನ ಸ್ನೇಹಿತರಾಗಿದ್ದ ಚಾದೋಕನ ಮತ್ತು ಹೂಷೈಯ ಸಹಾಯ ಕೇಳ್ತಾನೆ. (2 ಸಮು. 15:32-37) ಆ ಪ್ಲ್ಯಾನ್ ಪ್ರಕಾರ ಹೂಷೈ ನಾಟಕ ಆಡಿ ಅಬ್ಷಾಲೋಮನ ವಿಶ್ವಾಸ ಗಳಿಸ್ತಾನೆ ಮತ್ತು ದಾವೀದನನ್ನ ಹೇಗೆ ಕೊಲ್ಲಬೇಕು ಅಂತ ಸಲಹೆ ಕೊಡ್ತಾನೆ. ಅವನು ಹೀಗೆ ಮಾಡಿದ್ರಿಂದ ದಾವೀದನಿಗೆ ಯುದ್ಧಕ್ಕೆ ತಯಾರಾಗೋಕೆ ಸಮಯ ಸಿಕ್ತು. ಆಮೇಲೆ ಹೂಷೈ ಇದ್ರ ಬಗ್ಗೆ ಚಾದೋಕನಿಗೆ ಮತ್ತು ಎಬ್ಯಾತಾರನಿಗೆ ಹೇಳ್ತಾನೆ. (2 ಸಮು. 17:8-16) ಇವ್ರಿಬ್ರೂ ದಾವೀದನಿಗೆ ಈ ಸುದ್ದಿ ಮುಟ್ಟಿಸ್ತಾರೆ. ಹೀಗೆ ದಾವೀದನ ಜೀವ ಕಾಪಾಡ್ತಾರೆ.—2 ಸಮು. 17:21, 22. w24.07 4-5 ¶9-10