ಸೋಮವಾರ, ಏಪ್ರಿಲ್ 27
ವಿವೇಕ . . . ಯಾರಲ್ಲಿ ಇರುತ್ತೋ ಅವ್ರ ಜೀವ ಉಳಿಯುತ್ತೆ.—ಪ್ರಸಂ. 7:12.
“ದೇವರ ದೃಷ್ಟಿಯಲ್ಲಿ ಶ್ರೀಮಂತರಾಗೋದು ಬಿಟ್ಟು” ಹಣ-ಆಸ್ತಿ ಕೂಡಿಸಿ ಇಡೋದು ಮೂರ್ಖತನ ಅಂತ ಯೇಸು ಒಂದು ಉದಾಹರಣೆಯಲ್ಲಿ ಹೇಳಿದನು. (ಲೂಕ 12:16-21) ನಾಳೆ ಏನಾಗುತ್ತೆ ಅಂತ ನಮಗೆ ಯಾರಿಗೂ ಗೊತ್ತಿಲ್ಲ. (ಜ್ಞಾನೋ. 23:4, 5; ಯಾಕೋ. 4:13-15) ನಾವು ಯೇಸುವಿನ ಶಿಷ್ಯರಾಗಿರೋದ್ರಿಂದ ನಮಗೆ ಬೇರೆ ಬೇರೆ ರೀತಿಯ ಕಷ್ಟಗಳೂ ಬರುತ್ತೆ. ಆಗ ನಮ್ಮ ಹತ್ರ ಇರೋ ಎಲ್ಲಾನೂ ‘ಬಿಟ್ಕೊಡೋಕೆ’ ನಾವು ರೆಡಿ ಇರ್ಬೇಕು ಅಂತ ಯೇಸು ಹೇಳಿದನು. (ಲೂಕ 14:33) ಒಂದನೇ ಶತಮಾನದಲ್ಲಿದ್ದ ಯೂದಾಯದ ಕ್ರೈಸ್ತರಿಗೂ ಈ ತರ ಕಷ್ಟ ಬಂತು, ಅವರು ಆಸ್ತಿಪಾಸ್ತಿಯನ್ನ ಕಳ್ಕೊಂಡ್ರೂ ಸಂತೋಷವಾಗಿದ್ರು. (ಇಬ್ರಿ. 10:34) ಇವತ್ತೂ ಎಷ್ಟೋ ಸಹೋದರರು ವೋಟ್ ಹಾಕದೆ ಇದ್ದಿದ್ದಕ್ಕೆ ತಮ್ಮ ಆಸ್ತಿನೆಲ್ಲ ಕಳ್ಕೊಂಡಿದ್ದಾರೆ. (ಪ್ರಕ. 13:16, 17) ಇಂಥ ಕಷ್ಟದಲ್ಲೂ ಯೆಹೋವನಿಗೆ ನಿಯತ್ತಾಗಿರೋಕೆ ಅವ್ರಿಗೆ ಯಾವುದು ಸಹಾಯ ಮಾಡಿದೆ ಗೊತ್ತಾ? “ನಾನು ಯಾವತ್ತೂ ನಿನ್ನನ್ನ ಬಿಟ್ಟುಬಿಡಲ್ಲ. ನಾನು ಯಾವತ್ತೂ ನಿನ್ನ ಕೈ ಬಿಡಲ್ಲ” ಅಂತ ಯೆಹೋವ ಹೇಳಿರೋ ಮಾತು ಅವ್ರಿಗೆ ಸಹಾಯ ಮಾಡಿದೆ. (ಇಬ್ರಿಯ 13:5) ವಯಸ್ಸಾದ್ಮೇಲೆ ನಮ್ಮ ಜೀವನ ನೋಡ್ಕೊಳ್ಳೋಕೆ ಈಗ್ಲೇ ಒಂದು ಪ್ಲಾನ್ ಮಾಡಬಹುದು. ಆದ್ರೆ ನೆನಸದೆ ಇರೋ ಕಷ್ಟಗಳು ಬಂದ್ರೆ ಯೆಹೋವ ಖಂಡಿತ ಸಹಾಯ ಮಾಡ್ತಾನೆ ಅಂತ ಪೂರ್ತಿ ಭರವಸೆ ಇಡಬೇಕು. w25.03 29 ¶13-14
ಮಂಗಳವಾರ, ಏಪ್ರಿಲ್ 28
ಕ್ರಿಸ್ತನ ಬಗ್ಗೆ ನಾವು ಮೊದಮೊದ್ಲು ಕಲಿತ ಬೋಧನೆಗಳೇ ಸಾಕು ಅಂತ ಹೇಳ್ದೇ ಪ್ರೌಢರಾಗೋಕೆ ಪ್ರಗತಿ ಮಾಡ್ತಾ ಇರೋಣ.—ಇಬ್ರಿ. 6:1.
ಪ್ರೌಢರಾಗೋಕೆ ಯೆಹೋವ ನಮಗೆ ಹೇಗೆ ಸಹಾಯ ಮಾಡ್ತಾನೆ? ಸಭೆಯಲ್ಲಿ ಕುರುಬರಾಗಿ ಮತ್ತು ಬೋಧಕರಾಗಿರೋ ಸಹೋದರರಿಂದ ಸಹಾಯ ಮಾಡ್ತಾನೆ. ಅವರು ನಮ್ಮಲ್ಲಿ ಪ್ರತಿಯೊಬ್ಬರಿಗೂ “ದೊಡ್ಡವ್ರ ತರ” ಇರೋಕೆ ಅಂದ್ರೆ ‘ಕ್ರಿಸ್ತನ ತರ ಪೂರ್ತಿ ಪ್ರೌಢರಾಗೋಕೆ ಸಹಾಯ ಮಾಡ್ತಾರೆ.’ (ಎಫೆ. 4:11-13) ಇದಷ್ಟೇ ಅಲ್ಲ ಯೆಹೋವ ನಮಗೆ “ಕ್ರಿಸ್ತನ ಮನಸ್ಸನ್ನ” ಪಡ್ಕೊಳ್ಳೋಕೆ ಪವಿತ್ರಶಕ್ತಿನೂ ಕೊಡ್ತಾನೆ. (1 ಕೊರಿಂ. 2:14-16) ಇದ್ರ ಜೊತೆಗೆ ಯೆಹೋವ ಬೈಬಲಲ್ಲಿ ನಾಲ್ಕು ಸುವಾರ್ತಾ ಪುಸ್ತಕಗಳನ್ನ ಬರೆಸಿದ್ದಾನೆ. ಅದು ಯೇಸು ಭೂಮಿಯಲ್ಲಿದ್ದಾಗ ಹೇಗೆ ಯೋಚಿಸ್ತಿದ್ದನು, ಮಾತಾಡ್ತಿದ್ದನು, ನಡ್ಕೊಳ್ತಿದ್ದನು ಅಂತ ಕಲಿಸುತ್ತೆ. ಅದನ್ನ ಓದಿ ನಾವೂ ಯೇಸು ತರ ನಡ್ಕೊಳ್ಳೋಕೆ, ಯೋಚಿಸೋಕೆ ಪ್ರಯತ್ನ ಹಾಕಿದ್ರೆ ಖಂಡಿತ ಪ್ರೌಢರಾಗ್ತೀವಿ. ಆದ್ರೆ “ಕ್ರಿಸ್ತನ ಬಗ್ಗೆ ನಾವು ಮೊದಮೊದ್ಲು ಕಲಿತ ಬೋಧನೆಗಳೇ” ಸಾಕು ಅಂತ ಸುಮ್ಮನಾಗಿ ಬಿಟ್ರೆ ನಾವು ಪ್ರೌಢರಾಗೋಕೆ ಆಗಲ್ಲ. w24.04 4-5 ¶11-12
ಬುಧವಾರ, ಏಪ್ರಿಲ್ 29
ಬುದ್ಧಿ ನಿನಗೆ ಕಾವಲಾಗಿರುತ್ತೆ, ವಿವೇಚನಾ ಶಕ್ತಿ ನಿನ್ನನ್ನ ಕಾದುಕಾಪಾಡುತ್ತೆ.—ಜ್ಞಾನೋ. 2:11.
ನಾವೆಲ್ರೂ ಒಂದಲ್ಲ ಒಂದು ನಿರ್ಧಾರನ ಮಾಡ್ತಾನೇ ಇರ್ತೀವಿ. ಉದಾಹರಣೆಗೆ ಏನು ಅಡುಗೆ ಮಾಡೋದು, ಎಷ್ಟೊತ್ತಿಗೆ ಮಲಗೋದು ಅನ್ನೋದೆಲ್ಲ ಚಿಕ್ಕಪುಟ್ಟ ನಿರ್ಧಾರಗಳು. ಆದ್ರೆ ಇನ್ನೂ ಕೆಲವು ನಿರ್ಧಾರಗಳನ್ನ ಮಾಡೋದು ಅಷ್ಟು ಸುಲಭ ಅಲ್ಲ. ಯಾಕಂದ್ರೆ ಅದು ನಮ್ಮ ಆರೋಗ್ಯದ ಮೇಲೆ, ಸಂತೋಷದ ಮೇಲೆ, ಕುಟುಂಬದ ಮೇಲೆ, ನಾವು ಮಾಡೋ ಆರಾಧನೆ ಮೇಲೆ ಪ್ರಭಾವ ಬೀರುತ್ತೆ. ಹಾಗಾಗಿ ಯಾವುದೇ ನಿರ್ಧಾರ ಮಾಡಿದ್ರೂ ಅದ್ರಿಂದ ನಮಗೆ, ನಮ್ಮ ಕುಟುಂಬಕ್ಕೆ ಒಳ್ಳೇದಾಗಬೇಕು ಅಂತ ಆಸೆ ಪಡ್ತೀವಿ. ಎಲ್ಲಕ್ಕಿಂತ ಹೆಚ್ಚಾಗಿ ಅದು ಯೆಹೋವನಿಗೆ ಇಷ್ಟ ಆಗಬೇಕು ಅಂತ ಬಯಸ್ತೀವಿ. (ರೋಮ. 12:1, 2) ಒಳ್ಳೆ ನಿರ್ಧಾರಗಳನ್ನ ಮಾಡಬೇಕಂದ್ರೆ ಮುಖ್ಯವಾಗಿ ಎಲ್ಲಾ ವಿಷ್ಯಗಳನ್ನ ತಿಳ್ಕೊಳ್ಳೋದು ತುಂಬ ಮುಖ್ಯ. ಯಾಕೆ? ನೀವು ಹುಷಾರಿಲ್ಲದೆ ಡಾಕ್ಟರ್ ಹತ್ರ ಹೋಗಿದ್ದೀರ ಅಂದ್ಕೊಳ್ಳಿ. ಅವರು ನಿಮ್ಮ ಹತ್ರ ಏನೂ ಕೇಳದೆ ಮಾತ್ರೆಗಳನ್ನ ಬರೆದ್ಕೊಡ್ತಾರಾ? ಇಲ್ಲ ಅಲ್ವಾ. ನಿಮಗೆ ಏನ್ ಆಯ್ತು, ಯಾಕೆ ಈ ತರ ಆಗ್ತಿದೆ, ಯಾವಾಗೆಲ್ಲಾ ಆಗ್ತಿದೆ ಅಂತ ಪ್ರಶ್ನೆಗಳನ್ನ ಕೇಳಿ ನಿಮ್ಮನ್ನ ಚೆನ್ನಾಗಿ ತಿಳ್ಕೊಳ್ತಾರೆ. ಅದೇ ತರ ನೀವೂ ಒಂದು ಒಳ್ಳೆ ನಿರ್ಧಾರ ಮಾಡಬೇಕಂದ್ರೆ, ಮೊದ್ಲು ಅದಕ್ಕೆ ಸಂಬಂಧಪಟ್ಟ ಎಲ್ಲಾ ವಿಷ್ಯಗಳನ್ನ ತಿಳ್ಕೊಬೇಕು. w25.01 14 ¶1-3