ಸೋಮವಾರ, ಜೂನ್ 15
ದೇವರು ಮನುಷ್ಯರನ್ನ ತುಂಬ ಪ್ರೀತಿಸ್ತಾನೆ. ಅದಕ್ಕೇ ತನ್ನ ಒಬ್ಬನೇ ಮಗನನ್ನ ಕೊಟ್ಟನು.—ಯೋಹಾ. 3:16.
ಇಸ್ರಾಯೇಲ್ಯರು ತಮ್ಮ ಪಾಪಕ್ಕೆ ಕ್ಷಮೆ ಪಡ್ಕೊಳ್ಳೋಕೆ ಮತ್ತು ಯೆಹೋವನ ಜೊತೆ ಒಳ್ಳೇ ಸ್ನೇಹ-ಸಂಬಂಧ ಬೆಳೆಸ್ಕೊಳ್ಳೋಕೆ ಯೆಹೋವ ಒಂದು ತಾತ್ಕಾಲಿಕ ಏರ್ಪಾಡು ಮಾಡಿದನು. ಅದೇನಂದ್ರೆ ಇಸ್ರಾಯೇಲ್ಯರು ಪ್ರತಿ ವರ್ಷ ಒಂದು ವಿಶೇಷ ಹಬ್ಬ ಮಾಡಬೇಕಿತ್ತು. ಅದನ್ನ ಪ್ರಾಯಶ್ಚಿತ್ತ ದಿನ ಅಂತ ಕರೀತಿದ್ರು. ಆ ದಿನದಲ್ಲಿ ಮಹಾ ಪುರೋಹಿತ ಜನ್ರ ಪರವಾಗಿ ಪ್ರಾಣಿ ಬಲಿ ಕೊಡ್ತಿದ್ದ. ಆದ್ರೆ ಬರೀ ಪ್ರಾಣಿಗಳ ಬಲಿಯಿಂದ ಮನುಷ್ಯರ ಪಾಪನ ಪೂರ್ತಿಯಾಗಿ ತೆಗೆದುಹಾಕೋಕೆ ಆಗ್ತಿರಲಿಲ್ಲ. ಯಾಕಂದ್ರೆ ಪ್ರಾಣಿಗಳು ಮನುಷ್ಯರಿಗೆ ಸರಿಸಮ ಆಗಿರಲಿಲ್ಲ. ಆದ್ರೂ ಇಸ್ರಾಯೇಲ್ಯರು ಪಶ್ಚಾತ್ತಾಪಪಟ್ಟು ಯೆಹೋವ ಹೇಳಿದ ಹಾಗೇ ಬಲಿಗಳನ್ನ ಕೊಟ್ಟಾಗ ಆತನು ಅವ್ರ ಪಾಪಗಳನ್ನ ಕ್ಷಮಿಸೋಕೆ ರೆಡಿ ಇರ್ತಿದ್ದನು. (ಇಬ್ರಿ. 10:1-4) ಈ ಏರ್ಪಾಡು ಇಸ್ರಾಯೇಲ್ಯರಿಗೆ ತಾವು ಪಾಪಿಗಳಾಗಿದ್ದೀವಿ ಅನ್ನೋದನ್ನ ನೆನಪು ಹುಟ್ಟಿಸ್ತಾ ಇತ್ತು. ಆದ್ರೆ ಜನ್ರ ಪಾಪ ತೆಗೆದು ಹಾಕೋಕೆ ಯೆಹೋವ ಶಾಶ್ವತವಾಗಿ ಒಂದು ಏರ್ಪಾಡನ್ನ ಮಾಡಿದನು. ಅದೇನಂದ್ರೆ ಯೆಹೋವ ತನ್ನ ಪ್ರೀತಿಯ ಮಗನಾದ ಯೇಸು ‘ತುಂಬ ಜನ್ರ ಪಾಪಗಳನ್ನ ಹೊತ್ಕೊಳ್ಳೋಕೆ ಒಂದೇ ಒಂದು ಸಲ ತನ್ನನ್ನ ಅರ್ಪಿಸೋಕೆ’ ಏರ್ಪಾಡನ್ನ ಮಾಡಿದನು. (ಇಬ್ರಿ. 9:28) ಅಷ್ಟೇ ಅಲ್ಲ ಯೇಸುನೂ “ತುಂಬ ಜನ್ರಿಗಾಗಿ ತನ್ನ ಪ್ರಾಣವನ್ನ ಬಿಡುಗಡೆಯ ಬೆಲೆಯಾಗಿ” ಕೊಟ್ಟನು.—ಮತ್ತಾ. 20:28. w25.02 4 ¶9-10
ಮಂಗಳವಾರ, ಜೂನ್ 16
ನೀವು ಪಾಪ ಮಾಡದೆ ಇರಬೇಕಂದ್ರೆ ಎಚ್ಚರವಾಗಿದ್ದು ಪ್ರಾರ್ಥನೆ ಮಾಡ್ತಾ ಇರಬೇಕು.—ಮತ್ತಾ. 26:41.
ನಿಮಗೆ “ಮನಸ್ಸಿದೆ, ಆದ್ರೆ ದೇಹಕ್ಕೆ ಶಕ್ತಿ ಇಲ್ಲ.” (ಮತ್ತಾ. 26:41ಬಿ) ಈ ಮಾತುಗಳಿಂದ ನಮಗೆ ಏನು ಗೊತ್ತಾಗುತ್ತೆ? ನಾವು ಅಪರಿಪೂರ್ಣರು ಮತ್ತು ತಪ್ಪು ಮಾಡ್ತೀವಿ ಅನ್ನೋದನ್ನ ಯೇಸು ಅರ್ಥ ಮಾಡ್ಕೊಂಡಿದ್ದಾನೆ ಅಂತ ಗೊತ್ತಾಗುತ್ತೆ. ಅಷ್ಟೇ ಅಲ್ಲ ನಾವು ಯಾವಾಗ್ಲೂ ಸರಿಯಾಗಿರೋದನ್ನೇ ಮಾಡ್ತೀವಿ ಅಂತ ಅತಿಯಾದ ಆತ್ಮವಿಶ್ವಾಸ ಇಟ್ಕೊಬಾರದು ಅನ್ನೋ ಎಚ್ಚರಿಕೆ ಕೊಡೋಕೂ ಯೇಸು ಈ ಮಾತನ್ನ ಹೇಳಿದ್ದಾನೆ. ಯೇಸು ಇದನ್ನ ಹೇಳೋ ಸ್ವಲ್ಪ ಸಮಯದ ಮುಂಚೆ ‘ಏನೇ ಆದ್ರೂ ನಾವು ನಿನ್ನನ್ನ ಬಿಟ್ಟು ಹೋಗಲ್ಲ’ ಅಂತ ಆತನ ಶಿಷ್ಯರು ಮಾತು ಕೊಟ್ಟಿದ್ರು. (ಮತ್ತಾ. 26:35) ಅವರು ಒಳ್ಳೇ ಉದ್ದೇಶದಿಂದಾನೇ ಹಾಗೆ ಹೇಳಿದ್ರು. ಆದ್ರೆ ಒತ್ತಡ ಬಂದಾಗ ಸರಿಯಾಗಿರೋದನ್ನ ಮಾಡೋಕೆ ತಪ್ಪಿ ಹೋಗ್ತಾರೆ ಅಂತ ಅವರು ಅರ್ಥ ಮಾಡ್ಕೊಂಡಿರಲಿಲ್ಲ. ಅದಕ್ಕೇ ಯೇಸು ಅವ್ರಿಗೆ ಇವತ್ತಿನ ದಿನ ವಚನದಲ್ಲಿರೋ ಮಾತಿಂದ ಅವರನ್ನ ಎಚ್ಚರಿಸಿದನು. ಆದ್ರೆ ದುಃಖದ ವಿಷ್ಯ ಏನಂದ್ರೆ ಯೇಸುವಿನ ಶಿಷ್ಯರು ಎಚ್ಚರವಾಗಿ ಇರೋಕೆ ತಪ್ಪಿ ಹೋದ್ರು. ಯೇಸುವನ್ನ ಜನ್ರು ಹಿಡ್ಕೊಂಡು ಹೋದಾಗ ಅವರು ಆತನ ಜೊತೆನೇ ಇದ್ರಾ? ಇಲ್ಲ! ಎಚ್ಚರವಾಗಿ ಇಲ್ಲದೇ ಇದ್ದಿದ್ರಿಂದ ಅವರು ಏನು ಮಾಡಲ್ಲ ಅಂತ ಹೇಳಿದ್ರೋ ಅದನ್ನೇ ಮಾಡಿದ್ರು. ಅಂದ್ರೆ ಯೇಸುನ ಬಿಟ್ಟು ಓಡಿ ಹೋಗಿಬಿಟ್ರು.—ಮತ್ತಾ. 26:56. w24.07 14 ¶1-2
ಬುಧವಾರ, ಜೂನ್ 17
ಆತನ ಮಗ ನಮಗಾಗಿ ಸತ್ತಿದ್ರಿಂದ ದೇವರ ಜೊತೆ ನಾವು ಶಾಂತಿ ಸಂಬಂಧಕ್ಕೆ ಬಂದ್ವಿ.—ರೋಮ. 5:10.
ಆದಾಮ ಹವ್ವ ಯೆಹೋವನ ಜೊತೆ ಇದ್ದ ಅಮೂಲ್ಯ ಸಂಬಂಧನ ಕಳ್ಕೊಂಡ್ರು. ಮೊದ್ಲು ಆದಾಮ ಹವ್ವ ಯೆಹೋವನ ಕುಟುಂಬದ ಭಾಗ ಆಗಿದ್ರು. (ಲೂಕ 3:38) ಆದ್ರೆ ಯೆಹೋವನ ಮಾತು ಕೇಳದೇ ಇದ್ದಿದ್ರಿಂದ ಆತನು ಅವ್ರನ್ನ ತನ್ನ ಕುಟುಂಬದಿಂದ ಹೊರಗೆ ಹಾಕಿದನು. (ಆದಿ. 3:23, 24; 4:1) ಇದಾದ್ಮೇಲೆನೇ ಅವ್ರಿಗೆ ಮಕ್ಕಳು ಹುಟ್ಟಿದ್ರು. ಆ ಮಕ್ಕಳಲ್ಲಿ ನಾವೂ ಸೇರಿದ್ದೀವಿ. ಹಾಗಾಗಿ ನಾವೆಲ್ರೂ ಯೆಹೋವನ ಜೊತೆ ಶಾಂತಿ ಸಂಬಂಧ ಬೆಳೆಸ್ಕೊಬೇಕು. (ರೋಮ. 5:10, 11) ಇನ್ನೊಂದು ಮಾತಲ್ಲಿ ಹೇಳೋದಾದ್ರೆ ನಾವು ದೇವರ ಜೊತೆ ಒಳ್ಳೇ ಫ್ರೆಂಡ್ಶಿಪ್ ಬೆಳೆಸ್ಕೊಬೇಕು. “ಶಾಂತಿ ಸಂಬಂಧ” ಅನ್ನೋ ಪದಕ್ಕೆ ಗ್ರೀಕಲ್ಲಿ “ಶತ್ರುವನ್ನ ಸ್ನೇಹಿತನಾಗಿ ಮಾಡ್ಕೊಳ್ಳೋದು” ಅನ್ನೋ ಅರ್ಥನೂ ಇದೆ ಅಂತ ಒಂದು ರೆಫರೆನ್ಸ್ ಹೇಳುತ್ತೆ. ಆದ್ರೆ ಸಂತೋಷದ ವಿಷ್ಯ ಏನಂದ್ರೆ ಯೆಹೋವ ದೇವರೇ ಇದನ್ನ ಮಾಡೋಕೆ ಮೊದಲನೇ ಹೆಜ್ಜೆ ತಗೊಂಡಿದ್ದಾನೆ. ಅದು ಹೇಗೆ? ಪಾಪಿಗಳಾಗಿರೋ ಮನುಷ್ಯರು ತನ್ನ ಜೊತೆ ಮತ್ತೆ ಸ್ನೇಹ ಬೆಳೆಸ್ಕೊಳ್ಳೋಕೆ ಯೆಹೋವ ಒಂದು ಏರ್ಪಾಡನ್ನ ಮಾಡಿದನು, ಆ ಏರ್ಪಾಡೇ ಪ್ರಾಯಶ್ಚಿತ್ತ. ಅಂದ್ರೆ ಆದಾಮ ಕಳ್ಕೊಂಡಿದ್ದನ್ನ ಮತ್ತೆ ಪಡ್ಕೊಳ್ಳೋದು. ಇದಕ್ಕೆ ಯೆಹೋವನು ಸರಿಸಮವಾದ ಬೆಲೆ ಕೊಡಬೇಕಿತ್ತು. w25.02 3-4 ¶7-8