ಸೋಮವಾರ, ಜನವರಿ 5
ದೇವರ ಮಾತಿನ ಪ್ರಕಾರ ನಡೀರಿ. ಬರೀ ಕೇಳಿ ಅದನ್ನ ಬಿಟ್ಟುಬಿಡಬೇಡಿ.—ಯಾಕೋ. 1:22.
ಯೆಹೋವ ಮತ್ತು ಯೇಸು ನಾವೆಲ್ರೂ ಚೆನ್ನಾಗಿ ಇರಬೇಕಂತ ಇಷ್ಟಪಡ್ತಾರೆ. ಅದಕ್ಕೇ ಕೀರ್ತನೆ 119:2 ಹೀಗೆ ಹೇಳುತ್ತೆ: “ಆತನು ಕೊಡೋ ಎಚ್ಚರಿಕೆಗಳನ್ನ ಯಾರು ಪಾಲಿಸ್ತಾರೋ, ಪೂರ್ಣಹೃದಯದಿಂದ ಆತನಿಗಾಗಿ ಯಾರು ಹುಡುಕ್ತಾರೋ ಅವರು ಖುಷಿಯಿಂದ ಇರ್ತಾರೆ.” ಇದ್ರ ಬಗ್ಗೆನೇ ಯೇಸು “ದೇವರ ಮಾತು ಕೇಳಿಸ್ಕೊಂಡು ಅದ್ರ ಪ್ರಕಾರ ನಡೆಯೋರು ಇನ್ನೂ ಖುಷಿಯಾಗಿ ಇರ್ತಾರೆ” ಅಂತ ಹೇಳಿದನು. (ಲೂಕ 11:28) ಯೆಹೋವನ ಜನರಾಗಿರೋ ನಾವು ಪ್ರತಿದಿನ ದೇವರ ವಾಕ್ಯ ಓದ್ತಾ, ಅದ್ರ ಪ್ರಕಾರ ನಡಿತಾ ಇದ್ರೆ ಖುಷಿಖುಷಿಯಾಗಿ ಇರ್ತೀವಿ. (ಯಾಕೋ. 1:22-25) ಈ ತರ ಮಾಡಿದ್ರೆ ನಾವು ಯೆಹೋವನ ಮನಸ್ಸನ್ನ ಖುಷಿ ಪಡಿಸಬಹುದು. (ಪ್ರಸಂ. 12:13) ಅಷ್ಟೇ ಅಲ್ಲ, ನಮ್ಮ ಕುಟುಂಬ ಖುಷಿಖುಷಿಯಾಗಿ ಇರುತ್ತೆ, ಸಭೆಯಲ್ಲಿ ಒಳ್ಳೊಳ್ಳೆ ಸ್ನೇಹಿತರನ್ನ ಮಾಡ್ಕೊಬಹುದು. ಒಂದುವೇಳೆ ದೇವರ ಮಾತಿನ ಪ್ರಕಾರ ನಡಿದೇ ಇದ್ರೆ ಏನಾಗುತ್ತೆ? ತುಂಬ ಸಮಸ್ಯೆಗಳಲ್ಲಿ ಸಿಕ್ಕಿ ಹಾಕೊಳ್ತೀವಿ. ದೇವರ ಮಾತನ್ನ ಪಾಲಿಸಿದ್ರೆ ತುಂಬ ಸಮಸ್ಯೆಗಳಿಂದ ದೂರ ಇರಬಹುದು. ಅದಕ್ಕೇ ದಾವೀದ ಯೆಹೋವನ ಆಜ್ಞೆಗಳು, ನಿಯಮಗಳು, ನ್ಯಾಯತೀರ್ಪಿನ ಬಗ್ಗೆ ಹೇಳ್ತಾ “ಅವನ್ನ ಪಾಲಿಸಿದ್ರೆ ದೊಡ್ಡ ಬಹುಮಾನ ಸಿಗುತ್ತೆ” ಅಂತ ಹೇಳಿದ್ದಾನೆ.—ಕೀರ್ತ. 19:7-11. w24.09 2 ¶1-3
ಮಂಗಳವಾರ, ಜನವರಿ 6
ಹೃದಯ ಒಡೆದು ಹೋಗಿರೋರನ್ನ ವಾಸಿಮಾಡ್ತಾನೆ, ಅವರ ಗಾಯಗಳಿಗೆ ಪಟ್ಟಿ ಕಟ್ತಾನೆ.—ಕೀರ್ತ. 147:3.
ನಮ್ಮ ಪ್ರೀತಿಯ ಅಪ್ಪಾ ಯೆಹೋವ ನಮ್ಮನ್ನ ಒಂದೊಂದು ಕ್ಷಣನೂ ನೋಡ್ತಿದ್ದಾನೆ. ನಾವು ನಗುನಗ್ತಾ ಇರೋದನ್ನಷ್ಟೇ ಅಲ್ಲ ನಾವು ಕೊರಗ್ತಾ ಇರೋದನ್ನೂ ನೋಡ್ತಾನೆ. (ಕೀರ್ತ. 37:18) ನಾವು ನೋವನ್ನ ನುಂಗ್ಕೊಂಡು ಆತನ ಸೇವೆ ಮಾಡೋದನ್ನ ನೋಡುವಾಗ ಆತನಿಗೆ ನಮ್ಮ ಬಗ್ಗೆ ತುಂಬ ಹೆಮ್ಮೆ ಆಗುತ್ತೆ. ಹಾಗಂತ ಆತನು ನಮ್ಮ ಕಷ್ಟನ ನೋಡ್ಕೊಂಡು ಸುಮ್ನೆ ಇರಲ್ಲ. ನಮಗೆ ಸಹಾಯ ಮಾಡೋಕೆ, ಸಾಂತ್ವನ ಮಾಡೋಕೆ ತುದಿಗಾಲಲ್ಲಿ ನಿಂತಿದ್ದಾನೆ. ಯೆಹೋವ ಹೃದಯ ಒಡೆದು ಹೋಗಿರೋರ “ಗಾಯಗಳಿಗೆ ಪಟ್ಟಿ ಕಟ್ತಾನೆ” ಅಂತ ಕೀರ್ತನೆ 147:3 ಹೇಳುತ್ತೆ. ಅಂದ್ರೆ ಮನಸ್ಸಿಗೆ ಗಾಯ ಆದವ್ರನ್ನ ತುಂಬ ಚೆನ್ನಾಗಿ ನೋಡ್ಕೊಳ್ತಾನೆ ಅಂತ ಈ ವಚನ ಹೇಳುತ್ತೆ. ಹಾಗಾದ್ರೆ ಯೆಹೋವ ಕೊಡೋ ಸಹಾಯದಿಂದ ನಾವು ಹೇಗೆ ಪ್ರಯೋಜನ ಪಡ್ಕೊಬಹುದು? ಇದಕ್ಕೊಂದು ಉದಾಹರಣೆ ನೋಡಿ. ನಮಗೆ ಗಾಯ ಆದಾಗ ನಾವು ಒಬ್ಬ ಒಳ್ಳೇ ಡಾಕ್ಟರ್ ಹತ್ರ ಹೋಗ್ತೀವಿ. ಅವರು ನಮ್ಮ ಗಾಯನ ವಾಸಿ ಮಾಡೋಕೆ ಪಟ್ಟಿ ಕಟ್ತಾರೆ. ನಾವು ಏನು ಮಾಡಬೇಕು, ಏನು ಮಾಡಬಾರದು ಅಂತ ಹೇಳ್ತಾರೆ. ಅದನ್ನ ನಾವು ಪಾಲಿಸಬೇಕಲ್ವಾ? ಯೆಹೋವ ದೇವರು ಕೂಡ ಆ ಡಾಕ್ಟರ್ ತರ ಇದ್ದಾನೆ. ನಮ್ಮ ಮನಸ್ಸಿಗಾದ ನೋವಿಂದ ಹೊರಗೆ ಬರೋಕೆ ಏನೆಲ್ಲ ಮಾಡಬೇಕು ಅಂತ ಪ್ರೀತಿಯಿಂದ ಕೆಲವು ಸಲಹೆಗಳನ್ನ ಬೈಬಲಲ್ಲಿ ತಿಳಿಸಿದ್ದಾನೆ. w24.10 6 ¶1-2
ಬುಧವಾರ, ಜನವರಿ 7
ಅವೆಲ್ಲ ಭೂಮಿಯಿಂದ ಕಣ್ಮರೆ ಆಯ್ತು.—ಆದಿ. 7:23.
ಹಿಂದೆ ನಮ್ಮ ಪ್ರಕಾಶನಗಳಲ್ಲಿ ಯೆಹೋವ ದೇವರು ಅನೀತಿವಂತರಿಗೆ ನ್ಯಾಯ ತೀರಿಸುವಾಗ ಏನಾಗುತ್ತೆ ಅಂತ ತಿಳಿಸಿತ್ತು. ಅಂಥ ಜನ್ರು ಮತ್ತೆ ಜೀವಂತವಾಗಿ ಎದ್ದು ಬರಲ್ಲ ಅಂತ ನಾವು ಮುಂಚೆ ಹೇಳಿದ್ವಿ. ಅನೀತಿವಂತ ಜನ್ರಿಗೆ ನ್ಯಾಯ ತೀರಿಸಿದ್ರ ಬಗ್ಗೆ ಬೈಬಲಲ್ಲಿ ಇದೆ. ಆ ಘಟನೆಗಳ ಬಗ್ಗೆ ಯೋಚ್ನೆ ಮಾಡಿ. ಉದಾಹರಣೆಗೆ, ನೋಹನ ಸಮಯದಲ್ಲಿ ಜಲಪ್ರಳಯ ಬಂದಾಗ ಅವನ ಕುಟುಂಬದವರು ಬಿಟ್ಟು ಬೇರೆ ಎಲ್ರೂ ನಾಶ ಆದ್ರು. ದೇವರು ಮಾತುಕೊಟ್ಟ ದೇಶ ಆಗಿರೋ ಕಾನಾನಿಗೆ ಇಸ್ರಾಯೇಲ್ಯರು ಹೋದಾಗ ಅಲ್ಲಿದ್ದ ಏಳು ಜನಾಂಗಗಳನ್ನ ನಾಶ ಮಾಡೋಕೆ ಯೆಹೋವ ಅವ್ರಿಗೆ ಹೇಳಿದನು. ಅಶ್ಶೂರ್ಯರ 1,85,000 ಸೈನಿಕರನ್ನ ಒಬ್ಬ ದೇವದೂತ ಒಂದೇ ರಾತ್ರಿಯಲ್ಲಿ ಕೊಂದು ಹಾಕಿದ. (ಧರ್ಮೋ. 7:1-3; ಯೆಶಾ. 37:36, 37) ಈ ಘಟನೆಗಳಲ್ಲಿ ತಿಳಿಸಿರೋ ಜನ್ರಿಗೆ ಮತ್ತೆ ಜೀವಿಸೋ ಅವಕಾಶ ಸಿಗದೇ ಇರೋ ತರ ಯೆಹೋವ ಅವ್ರನ್ನ ಶಾಶ್ವತಕ್ಕೂ ನಾಶ ಮಾಡಿದನು ಅಂತ ಬೈಬಲ್ ಹೇಳುತ್ತಾ? ಇಲ್ಲ. ಆ ಜನ್ರಿಗೆ ದೇವರು ಹೇಗೆ ತೀರ್ಪು ಮಾಡಿದನು ಅಂತ ನಮಗೆ ಗೊತ್ತಿಲ್ಲ. ಅಷ್ಟೇ ಅಲ್ಲ ಅವರೆಲ್ರಿಗೂ ಯೆಹೋವನ ಬಗ್ಗೆ ಕಲಿತು ತಪ್ಪನ್ನ ತಿದ್ಕೊಳ್ಳೋಕೆ ಅವಕಾಶ ಸಿಗ್ತಾ ಅಂತಾನೂ ಗೊತ್ತಿಲ್ಲ. w24.05 3 ¶5-7